Friday, April 22, 2011

ಬಾಲ್ಯದ ಭಾನಗಡಿಗಳು (ಭಾಗ ೧)



ಲಾಟೀನುಮಂಜಪ್ಪಜ್ಜನೂ, ನೀರು ಸರ್ಪವೂ ಮತ್ತೆ ನನ್ನ ಚಡ್ಡಿದೋಸ್ತ್..............


ಛಕ್ ... ಛಕ್ ....ಚಕ್... ಬಾತುರೂಮಿನ ನಲ್ಲಿಯಲ್ಲಿ ನೀರಿನ ಹನಿಗಳು ನಿಧಾನವಾಗಿ ತೊಟ್ಟಿಕ್ಕುತ್ತಾ ಇದೆ. ರಾತ್ರಿ ಹನ್ನೆರಡರ ಸಮಯ ಎಲ್ಲೆಲ್ಲೂ ನಿಶ್ಶಬ್ಧ..! ಒಂಟಿಯಾಗಿ ಕುಳಿತ  ನನ್ನ  ಮನಸ್ಸಿನ ಮೂಲೆಯಲ್ಲಿ ಒಂದು ಆಲೋಚನೆ ಥಟ್ಟನೆ ಸುಳಿದು ಮಾಯವಾಯಿತು.ಹಗಲಿನ ಸಮಯದಲ್ಲಾದರೆ ನಲ್ಲಿಯಿಂದ ಬಿದ್ದ  ನೀರಿನ ಶಬ್ಧ ಕಿವಿಗೆ ಕೇಳಿಸದು. ತತ್ತರಿಕಿ.........! ಈ ಪ್ಯಾಟೆಯ ಗೌಜಿನಲ್ಲಿ ನಾನು ಕಳೆದು ಹೋಗುತ್ತಿದ್ದೇನೆಯೇ?  ನಲ್ಲಿಯಿಂದ ತೊಟ್ಟಿಕ್ಕುವ  ನೀರು ಅರ್ಧ ತುಂಬಿದ ಬಕೇಟಿನಲ್ಲಿ ಬಿದ್ದು ತನ್ನದೇ ಆದ ತರಂಗ ನಾದದಿಂದ ಪರಿಸರವನ್ನ ವ್ಯಾಪಿಸ ತೊಡಗಿತು. ಯೋಚನೆಯು  ಎಲ್ಲಿಗೋ ಹಂಚಿ ಹೋಯಿತು. ರಾತ್ರಿಯ ಮೌನದಲ್ಲಿ. ನನ್ನ  ತಲೆಯಲ್ಲಿ ಆಲೋಚನೆಗಳು ಬಿಚ್ಚಿಕೊಳ್ಳ ತೊಡಗಿದವು.................. ಬಾಲ್ಯದ ಗೆಳೆಯ ಮನೋಹರ. ಪಕ್ಕದ ಮನೆಯ ಸುಬ್ಬುರಾಯರ ಮಗ. ಒಂದೇ ವಯಸ್ಸು ಅದೇನೊ ಅಂತಾರಲ್ಲ ಚಡ್ಡಿ ದೋಸ್ತ್ ಅಂತ.ಹಾಗೆ ನಮ್ಮ ಸ್ನೇಹ. ಚಡ್ಡಿ ಅಂದಕೂಡಲೆ ನೆನಪಾಯಿತು ನೋಡಿ. ಆ ದಿನಗಳಲ್ಲಿ ನಾವು ಹಾಕಿ ಕೊಳ್ಳುತ್ತಿರುವ ಚಡ್ಡಿಗಳಲ್ಲಿ ಗುಂಡಿ ಕಿತ್ತು ಹೋಗಿರುವದೇ ಹೆಚ್ಚು. ಜಾರುತ್ತಿರುವ ಚಡ್ಡಿಯನ್ನ ಒಂಟಿಕೈಯಲ್ಲಿ ಯಥಾಸ್ಥಾನಕ್ಕೆ ಸೇರಿಸಿ ಕೊಳ್ಳುತ್ತಾ ನಾನು ಮತ್ತು  ಅವನು ಜಿದ್ದಿಗೆ ಬಿದ್ದವರಂತೆ ನದಿಗೆ  ಹಾರುತ್ತಿದ್ದೆವು. ನಾವು ಬುದ್ಧಿ ಬಲಿಯುವ ಮೊದಲೇ ಈಜು ಕಲಿತಾಗಿತ್ತು. ಮೊದಮೊದಲು ನೀರಿಗೆ ಹಾರುವಾಗ ನಮ್ಮ ಚಡ್ಡಿಗಳು ಹೊಳೆಯ ದಂಡೆಯ ಮೇಲೆ ಬಿಚ್ಚಿಟ್ಟು ಹಾರುತ್ತಿದ್ದೆವು. ನೀರಿಗಿಳಿಯುವಾಗ ಬಟ್ಟೆಯು ತೊಡಕಾಗುತ್ತಿತ್ತು. ಕೆಲವು ದಿನಗಳ ನಂತರ ಅದ್ಯಾಕೋ ಚಡ್ಡಿ ಇಲ್ಲದೇ ನೀರಿಗೆ ಇಳಿಯುವದು ಮುಜುಗರ ತರುತ್ತಿತ್ತು.ಆಗಲೇ ಗೊತ್ತಾದದ್ದು ನನಗೂ ಮರಿಯಾದಿ  ಇದೆ ಎಂದು. ಅದಕ್ಕೆ ಕಾರಣ ಪಕ್ಕದ ತುದಿ ಮನೆಯ ಲಾಟೀನು ಅಜ್ಜ. ಅವನು ಸಂಜೆಯ ಸಮಯದಲ್ಲಿ  ಎಲ್ಲಿಗಾದರು ಪ್ರಯಾಣ ಮಾಡಬೇಕಾದರೆ ಬ್ಯಾಟರಿಯ ಬದಲು ಸೀಮೆಯೆಣ್ಣೆಯಿಂದ ಉರಿಸುವ ಲಾಟೀನು ಹಿಡಿದು ಹೋಗುತ್ತಿದ್ದ. ಆದ್ದರಿಂದಲೇ ಜನರು ಅವನಿಗೆ ಲಾಟೀನು ಮಂಜಪ್ಪ ಅನ್ನುತ್ತಿದ್ದರು. ನಮಗೆಲ್ಲ ಆವನು ಲಾಟೀನ್ ಅಜ್ಜನಾಗಿದ್ದ. ಆವತ್ತಿನ ಕಾಲದಲ್ಲಿ ನಮ್ಮೂರಿನಲ್ಲಿ ಬೀದಿ ದೀಪಗಳು ಬಂದಿರಲಿಲ್ಲ. ಬಹುತೇಕ ಜನರು ರಾತ್ರಿ ತಿರುಗಾಟಕ್ಕೆ  ಮೂರು ಶಲ್ಲಿನ ಬ್ಯಾಟರಿ ಅಥವಾ ತೆಂಗಿನ ಗರಿಯ ಸೂಡಿಯನ್ನ ಉಪಯೋಗಿಸುತ್ತಿದ್ದರು. 

ಸುಮ್ಮನೆ ನಾವು ನೀರಿನಲ್ಲಿ ನಿರ್ವಸ್ತ್ರ ಧಾರಿಗಳಾಗಿ ಜಿಗಿಯುತ್ತಿದ್ದರೆ ತದೇಕ ಚಿತ್ತದಿಂದ ನೋಡಿತ್ತ ಕುಳಿತುಕೊಳ್ಳುತ್ತಿದ್ದ ಲಾಟೀನು ಅಜ್ಜ. ಹೊಳೆಯ ದಂಡೆಯ ಮೇಲೆ ಕೈಯಲ್ಲೊಂದು ಉರಿವ ಬೀಡಿಯ ತುಣುಕನ್ನು ಹಿಡಿದು ಆಳವಾಗಿ ಅದನ್ನ ತನ್ನ ಒಡಲಿಗೆ ಎಳೆದುಕೊಳ್ಳುತ್ತಾ ಒಮ್ಮೋಮ್ಮೆ ಮೂಗಿನಿಂದ ಮಗದೊಮ್ಮೆ ಬಾಯಿಂದ ಹೊಗೆಯನ್ನ ತೇಲಿ ಬಿಡುತ್ತಿದ್ದ.ಒಂದಿನ ಹೀಗೆ ನಮ್ಮ ನೀರಾಟವನ್ನೇ ನೋಡುತ್ತಾ ಕುಳಿತಿದ್ದ ಲಾಟಿನ್ ಅಜ್ಜ ನಮ್ಮನ್ನ ಕರೆದು "ಮಕ್ಳಾ ಒಂದು ಗುಟ್ಟು ಹೇಳ್ತೀನಿ ಕೇಳಿ " ಅಂದ. ನಾವು ಆಸಕ್ತಿಯಿಂದ ಕಿವಿಯನ್ನ ಅಗಲಿಸಿ ಕೊಂಡೆವು . ಅದೋ ಅಲ್ಲಿ ಆ ಹರಿವ ನೀರಿನ  ಮೂಲೆಯಲ್ಲಿ ಒಂದು ನೀರು ಸರ್ಪ ಇದೆ. ನಾನು ಬಹಳ ವರ್ಷಗಳಿಂದ ನೋಡಿದ್ದೇನೆ.ಅದು ಏನು ಮಾಡುತ್ತೆ ಗೊತ್ತಾ...?  "ನೀವು ನೀರಿನಲ್ಲಿ ಈಜಾಡುವಾಗ ನೀರಿನ ಒಳಗಿಂದ ಬಂದು ನಿಮ್ಮ  ಮಿಡಿಕಾಯಿಯನ್ನ ಕಚ್ಚಿಕೊಂಡು ಹೋಗಿಬಿಡುತ್ತದೆ "ಅಂತ ಅದರ ಕಠೋರತೆಯನ್ನ ತನ್ನ ಅಭಿನಯ ಜೊತೆಯಾಗಿಸಿ  ಹೇಳಿದ.ನಮಗೂ ಕೂಡ ಅವನ ಮಾತು ನಿಜವೆನಿಸಿತು. ನೀರನಲ್ಲಿ ಈಜುವಾಗ ಒಮ್ಮೊಮ್ಮೆ ನೀರಿನ ಮಧ್ಯದಲ್ಲಿ ನಿರೊಳ್ಳೆಯೋ ನೀರು ಸರ್ಪವೋ ಮತ್ಯಾವುದೋ ಹಾವುಗಳು ಕಾಣಿಸಿಕೊಳ್ಳುವದು ಸಾಮಾನ್ಯವಾಗಿತ್ತು. ನಾವು ಅಜ್ಜನ ಮಾತನ್ನ ಹೌದೆಂದು ನಂಬಿದೆವು.ಅಲ್ಲಿಂದಮೇಲೆ ನಾವು ಚಡ್ಡಿಹಾಕದೆ ನೀರಿಗಿಳಿದ ದಾಖಲೆಗಳಿಲ್ಲ.


     ಅದು ಸುಡುವ ಬೇಸಿಗೆ ಕಾಲವಾದ ಎಪ್ರಿಲ್ ಅಥವಾ ಮೇ ತಿಂಗಳ ಆದಿ ಭಾಗದ ಸಮಯವಾಗಿರಬಹುದು ಅಂತ ನನಗೆ ನೆನಪು. ಎಂದಿನಂತೆ ನಾವು ಮಧ್ಯಾಹ್ನ ಹನ್ನೊಂದರ ಸಮಯದಲ್ಲಿ ನೀರಿಗಿಳಿದಾಗಿತ್ತು. ಸುಮಾರು ಹನ್ನೆರಡು ಗಂಟೆಯ ಸಮಯ ನಾವು ಇಬ್ಬರೂ ನೀರಿನಿಂದ ಮೇಲೆ ಬಂದು ಸುಮ್ಮನೆ ಹೊಳೆ ದಂಡೆಯ ಮೇಲೆ ಕುಳಿತಿದ್ದೆವು.ನನ್ನ ಗೆಳೆಯನ ಮುಖದಲ್ಲಿ ಯಾವುದೋ ಹೊಸ ಆಲೋಚನೆಯ ಭಾವ ಎದ್ದು ಕಾಣುತ್ತಿತ್ತು. ಗೆಳೆಯ ಹೇಳಿದ "ಇವತ್ತೇ ಕೊನೆ ನಾವು ಈಜಾಡುವದು. ಇನ್ನುಮುಂದೆ ನಾನು ಈಜಲು ಬರುವದಿಲ್ಲ ಎಂದ". ಯಾಕಪ್ಪಾ ಏನಾಯ್ತು ನಿಂಗೆ ಅಂತ ನಾನು ಪ್ರಶ್ನಿಸಿದೆ. ಹೇ....! ಯಾರಿಗೂ ಹೇಳಬಾರದು ಅನ್ನುವ ಭಾಷೆ ತೆಗೆದುಕೊಂಡು ಗೆಳೆಯ ಮಾತಿಗೆ ಶುರುವಿಟ್ಟ. ನಾನು ದೂರದ ಬೊಂಬಾಯಿಗೆ ಓಡಿ ಹೋಗುತ್ತಿದ್ದೇನೆ ಅಂದ.ನಾನು ಒಮ್ಮೆ ಅವಕ್ಕಾದೆ...!  ಅವನದು ಮಾತು ಕಡಿಮೆ.ಹೇಳಬೇಕಾದ ಎಷ್ಟೋ ವಿಷಯಗಳಿದ್ದರೂ ಅದನ್ನ ನನ್ನಲ್ಲಿ ಒಂದೇ ವಾಖ್ಯದಲ್ಲಿ ಹೇಳಿ ಮುಗಿಸಿ ಬಿಡುತ್ತಿದ್ದ. ಮಾತೇ ಬಾರದಾಯಿತು. ಯಾಕಪ್ಪ ನೀನು ಬೊಂಬಾಯಿಗೆ ಹೋಗುತ್ತಿರುವದು.ಅದು ಯಾರಿಗೂ ತಿಳಿಸದೆ.ಅಲ್ಲಿಗೆ ಹೋಗಲು ನಿನಗೆ ದಾರಿ ಹ್ಯಾಗೆ ಗೊತ್ತಾಗುತ್ತೆ..? ಮತ್ತೆ ದಾರಿಯಲ್ಲಿ ಬಸ್ಸು ಕರ್ಚಿಗೆ ಏನು ಮಾಡ್ತೀಯಾ ? ನಿನಗೆ ಬೊಂಬಾಯಿಯವರ ಭಾಷೆ ಬರುತ್ತದೆಯೇ...? ಹಶಿವಾದರೆ ಏನು ಮಾಡ್ತೀಯಾ...? ಅಲ್ಲಿ ಹೋಗಿ ನೀನು ಮಾಡುವದಾದ್ರೂ ಏನು. ನಿನ್ನ ಮುಂದಿನ ಶಾಲೆ ಕಲಿಕೆಯ ಕಥೆ ಏನು....ನೀನು ಬೊಂಬಾಯ್ ನ್ನ ಹ್ಯಾಗೆ ಸೇರುತ್ತೀಯಾ ....? ಅನ್ನುವದಾಗಿ ನೂರಾರು ಪ್ರಶ್ನೆಯನ್ನ ನಾನು ಅವನಿಗೆ ಕೇಳಿದೆ. ಅದೆಲ್ಲದಕ್ಕೆ ಉತ್ತರಿಸ ಬೇಕೆನ್ನುವ ಇರಾದೆ ಅವನ ಮುಖದಲ್ಲಿದ್ದಂತೆ ನನಗೆ ಕಾಣಿಸಲಿಲ್ಲ. ಆದರೆ ಅವನ ನಡೆಯಂತೂ ನಿಚ್ಚಳವಾಗಿತ್ತು ಅನ್ನುವದು ಅವನ ಮುಖವನ್ನ ನೋಡದರೆ ಅರ್ಥವಾಗಿಸಿ ಕೊಳ್ಳಬಹುದಿತ್ತು. ಏನೋ ಹೇಳಲು ಅನುವುಮಾಡಿದ. ಅಷ್ಟು ಹೊತ್ತಿಗೆ ಅಲ್ಲಿಗೆ ನಮ್ಮ ಲಾಟೀನ್ ಅಜ್ಜನ ಆಗಮನ ಆಯಿತು. ನಮ್ಮ ಮಾತುಕಥೆಗೆ ಅಲ್ಲಿಗೆ ಕಡಿವಾಣ ಬಿತ್ತು.ಅತ್ತ ಕಡೆಯಿಂದ ನಮ್ಮ ತಾಯಿಯ  ಏರು ಧ್ವನಿ ನನ್ನನ್ನ ಊಟಕ್ಕೆ ಕರೆಯುತ್ತಿತ್ತು. ಮತ್ತೆ ನಾವು  ನೀರಿನಲ್ಲಿ ಒಂದುಬಾರಿ ಮುಳುಗುಹಾಕಿ ಮನೆಯತ್ತ ಓಡಿದೆವು...................(ಮುಂದುವರೆಯುವದು)

ಗೆಳೆಯರೇ ಸುಮ್ಮನೆ ಕೂಳಿತ  ಸಂದರ್ಭದಲ್ಲಿ ನನಗೆ ಬಾಲ್ಯದ ಕಳೆದು ಹೋದ ದಿನಗಳ ಬಗ್ಗೆ ನೆನಪು ಬರುತ್ತದೆ. ಒಮ್ಮೊಮ್ಮೆ ಆ ನೆನಪುಗಳು ಮತ್ತು ಕಥೆಯ ವ್ಯಕ್ತಿಗಳು ಇಂದಿನ ಬದುಕಿನ ಜೊತೆಗೂ ತಳಕು ಹಾಕಿಕೊಂಡಿರುತ್ತಾರೆ.ಹಿಂದಿನ ಪೋಸ್ಟಿನಲ್ಲಿ ಬಾಲ್ಯ ಅದೆಷ್ಟು ಸುಂದರ ಅನ್ನುವ ತಲೆಬರಹದಡಿ ಬಾಲ್ಯದ ನೆನಪಿನ ಹಸಿರಿನ ಬಗ್ಗೆ ಬರೆದಿದ್ದೆ. ಬಾಲ್ಯದ ಆ ದಿನಗಳನ್ನ ನೆನೆದರೆ ಅದು ಒಂದು ಹತ್ತು ಕಂತುಗಳಲ್ಲಿ ಬರೆಯಬಹುದಾದಂತ ಸಣ್ಣ ದಾರಾವಾಹಿಯೇ ಆಗಬಹುದು ಅಂತ ಅನಿಸಿತು. ಅದಕ್ಕಾಗಿ ನನ್ನ ಬಾಲ್ಯದ ನೆನಪುಗಳನ್ನ ಕಥೆಯ ರೂಪದಲ್ಲಿ ಹಣೆದು ನಿಮ್ಮ ಮುಂದೆ ಕಂತಿನ ಲೆಕ್ಕಾಚಾರದಲ್ಲಿ ಇಡುತ್ತಿದ್ದೇನೆ. ಮುಂದೆ  ನನ್ನ ಗೆಳೆಯ ಮನೋಹರನ ಓಡಿ ಹೋಗುವ ಆಸೆ ಫಲಿಸಿತೆ  .... ಅವನು ಯಾಕಾಗಿ ಇವತ್ತಿನ ರಾತ್ರಿಯ ನೀರವತೆಯಲ್ಲಿ ನನ್ನ ಚಿತ್ತವನ್ನ ಹೊಕ್ಕಿದ.....? ಬಾಲ್ಯದ  ನೆನಪುಗಳ ಬುತ್ತಿಯಿಂದ ಮತ್ತ್ಯಾವ ಯಾವ ಕಥೆ ಬಿಚ್ಚಿಕೊಳ್ಳುತ್ತದೆ ......... ಬಾಲಕ  ತನದಲ್ಲಿ ಮಾಡಿದ ಕೀಟಲೆಗಳನ್ನ,ಭಾನಗಡಿಗಳನ್ನ ,ಆಟಗಳನ್ನ, ನೆನಪುಗಳನ್ನ, ಕಥೆಯ ಮಧ್ಯದಲ್ಲಿ ಜೋಡಿಸುವ ಪ್ರಯತ್ನ ಮಾಡಿದ್ದೇನೆ. ಅಲ್ಲದೇ ಬಾಲ್ಯದ ನೆನಪುಗಳು ಯಾವಗಲೂ ನಮ್ಮನ್ನ  ಬಾಧಿಸುತ್ತಿರುವದೇಕೆ...? ಎನ್ನುವ ಎಲ್ಲಾ ವಿಷಯಗಳನ್ನ ಹೊತ್ತು ನಿಮ್ಮ ಮುಂದೆ ನನ್ನ ಬಾಲ ಭಾಷೆಯ ತೊದಲು ನುಡಿಗಳನ್ನ ಹೋತ್ತು ಬರುತ್ತೇನೆ .....ಆಶೀರ್ವದಿಸಿ.



8 comments:

  1. ಅಧ್ಬುತ ಲೆಕನ... ಆದರೆ ಒಂದು ಮಿಸ್ಟಿಕ್.....
    ಬಾತ್ ರೂಮಲ್ಲಿ ನೀರು ಛಕ್ ... ಛಕ್ ....ಚಕ್... ಅಂತ ಬೀಳಲ್ಲ,
    ಪುಳಕ್ ಪುಳಕ್ ಪುಳಕ್ ಪುಳಕ್ ಅಂತ ಬೀಳುತ್ತದೆ. :)

    ReplyDelete
  2. Guru....... matella gottatu iilatin mudka matra yaru heli gottagta illyo......

    Ninna "ಮಿಡಿಕಾಯಿಯn" muttinodka iddoheli........

    ReplyDelete
  3. baanagadi MA.BA. .....:) :) baalyada kate chennagide.....

    @ GB... ;) ;)

    ReplyDelete
  4. chennaagide savi nenapu.abhinandanegalu.

    ReplyDelete
  5. ಗೆಳೆಯರೆ, ನೀವು ಚಿಕ್ಕ ವಯಸ್ಸಿನವರಂತೆ ಕಾಣುತ್ತೀರಿ. ಆದರೆ "ಆವತ್ತಿನ ಕಾಲದಲ್ಲಿ ನಮ್ಮೂರಿನಲ್ಲಿ ಬೀದಿ ದೀಪಗಳು ಬಂದಿರಲಿಲ್ಲ." ಎಂದಿದೆಯಲ್ಲ ಅದು ಯಾವ ಇಸವಿ?

    ಈ ಸಾಲು ತುಂಬಾ ಅರ್ಥಗರ್ಭಿತವಾಗಿದೆ: "ನೀವು ನೀರಿನಲ್ಲಿ ಈಜಾಡುವಾಗ ನೀರಿನ ಒಳಗಿಂದ ಬಂದು ನಿಮ್ಮ ಮಿಡಿಕಾಯಿಯನ್ನ ಕಚ್ಚಿಕೊಂಡು ಹೋಗಿಬಿಡುತ್ತದೆ". ಚೆನ್ನಾಗಿ ನಿರೂಪಿಸಿದ್ದೀರಿ, ಮುಂದುವರೆಸಿ ಕೂತುಹಲವಿದೆ. ನನ್ನ ಪ್ರಶ್ನೆಗೆ ಅನ್ಯಥಾ ಭಾವಿಸದೆ sathishgbb@gmail.com ಗೆ ಉತ್ತರಿಸಿ.

    ReplyDelete
  6. ಪ್ರಿಯ ಗುಬ್ಬಚ್ಚಿ ಸತೀಶ್ ಸರ್ ನೀವು ಕೇಳಿದ ಪ್ರಶ್ನೆ ಸಮಂಜಸವಾದುದು. ನಾನು ಹೇಳುತ್ತಿರುವ ಕಥೆಯ ಕಾಲಘಟ್ಟ ತೊಂಬತ್ತನೆಯ ದಶಕದ ಮೊದಲ ಭಾಗದ್ದು. ಆಗ ಬೀದಿದಿಪಗಳು ನಮ್ಮೂರಿಗೆ ಬಂದಿರಲಿಲ್ಲ. ನಾನು ನಮ್ಮೂರಲ್ಲಿ ಬೀದಿದೀಪವನ್ನ ನೋಡಿದ್ದು ಎರಡು ಸಾವಿರದ ಇಸವಿಯ ನಂತರ ಅಂದರೆ ಸುಮಾರು ಹತ್ತು ವರುಷಗಳ ಹಿಂದೆ ನಮ್ಮೂರಲ್ಲಿ ಈಗಲೂ ಸಮರ್ಪಕವಾದ ಬೀದಿ ದೀಪಗಳ ವ್ಯವಸ್ಥೆ ಇಲ್ಲ. ಅದರ ಬಗ್ಗೆ ಇನ್ನೋಂದು ಸಂಚಿಕೆಯಲ್ಲಿ ಬರೆಯುತ್ತೇನೆ.ನಮ್ಮೂರ ರಸ್ತೆಗಳಲ್ಲಿ ಅಲ್ಲಲ್ಲಿ ಬೀದಿದೀಪಗಳು ಇದ್ದರೂ ಸಹ ಒ೦ದು ಬೀದಿ ದೀಪದಿ೦ದ ಇನ್ನೊ೦ದು ಬೀದಿ ದೀಪಕ್ಕೆ ಸುಮಾರು ಅರ್ಧ ಕಿಮೀ ಅ೦ತರ ಇದೆ . ಹಾಗಾಗಿ ಮಧ್ಯದ ಹಾದಿ ಕತ್ತಲೋ ಕತ್ತಲು. ಅಮಾವಾಸ್ಯೆಯ ದಿನಗಳಲ್ಲಿ ಏನೇನು ಗೋಚರವಾಗುವದಿಲ್ಲ . ಉತ್ತರ-ದಕ್ಷಿಣ ಕನ್ನಡ ಜಿಲ್ಲೆಗಳಲ್ಲಿ ಈಗಲೂ ಬೀದಿ ದೀಪಗಳನ್ನ ಕಾಣದ ಅ೦ತಹ ಕುಗ್ರಾಮಗಳಿವೆ.

    ReplyDelete
  7. ಟಿಕೆಟ್ ಇಲ್ಲದೆ, ನಮ್ಮಗೆ ನಿಮ್ಮ ಬಾಲ್ಯದ ಪ್ರಯಾಣ ಮಾಡಿಸ್ತಾ ಇದ್ದೀರಾ..., ಧನ್ಯವಾದಗಳು
    ೨ನೆ ಬಾಗ ಯಾವಾಗ..?

    ReplyDelete