Thursday, July 25, 2013

ಆ ಕಾಡು ಈ ಮಳೆ ಜೋಡಿ ಮದುವೆ



ಆಷಾಢದಲ್ಲಿ ನಮ್ಮ ಮಲೆನಾಡಿನಲ್ಲಿ ಯಾವ ಪರಿ ಮಳೆಯ ಅಬ್ಬರ ಇರುತ್ತದೆಂದು ನಿಮಗೆ ನಾನೇನು ಹೊಸದಾಗಿ ಹೇಳಬೇಕಾದ್ದಿಲ್ಲ. ಒಮ್ಮೆ ಜಿಟಿ ಜಿಟಿ ಮಳೆ. ಇನ್ನೊಮ್ಮೆ ಕಪ್ಪು ಕರಗಪ್ಪು ಮೋಡ. ಕಣ್ಣು ಮುಚ್ಚಿಕೊಂಡು ಮಳೆ ಸುರಿಯಲು ಆರಂಭಿಸಿತೆಂದರೆ ಫುಲ್ ಸ್ಟಾಪ್ ಹಾಕಲು ಒಂದೋ ಮಳೆ ನಕ್ಷತ್ರ ಬದಲಾಗಬೇಕು ಇಲ್ಲ ಮೋಡ ಖಾಲಿಯಾಗಬೇಕ

ಆಷಾಢದ ಮಳೆಗೆ ಬಯಕೆಗಳು ಹೆಚ್ಚು
ಹಬೆಯಾಡುವ ಸಾಂಬಾರು
ಹುರಿದ ಶೇಂಗಾ
ಒಣಸಿಟ್ಟ ಹಲಸಿನ ಬೀಜ
ಬರಣಿಗೆಯ ಅಪ್ಪೆಮಿಡಿ
ಕಟ್ಟಿಟ್ಟ ಹಪ್ಪಳ
ಗೇರುಬೀಜ
ಸಂಡಿಗೆ ಮಂಡಕ್ಕಿ
ಎಲ್ಲವೂ ಮನೆಯಲ್ಲಿ ಇದ್ದರೂ
ದೂರದ ನೆಂಟರ ಮನೆಯಲ್ಲಿ ಆಷಾಢದಲ್ಲೇ ಮದುವೆ
ಹೋಗಲೇ ಬೇಕು
ಇಲ್ಲವೆಂದರೆ ಬೇಜಾರಾಗುತ್ತೆ
ಅವರಿಗಲ್ಲ ನನಗೆ
ಒಂದು ಬಿಸಿ ಬಿಸಿ ಪಾಯಾಸ ಮಿಸ್ ಆಗಿದ್ದಕ್ಕೆ.  

ಆಷಾಢದ ಮಳೆಯಬಗ್ಗೆ ಕುಯ್ತಾ ಇದ್ರೆ ನಿಮಗೆ ನಮಗೆ ಇಬ್ರಿಗೂ ತಂಡಿಯಾಗುತ್ತೆ. ಮೆಣಸಿನ ಕಾಳು ಕಷಾಯ ಕುಡಿಬೇಕಾಗುತ್ತೆ. ವಿಷಯಕ್ಕೆ ಬರೋಣ. ಮೊನ್ನೆ ನಮ್ಮ ಅಪ್ಪಚ್ಚಿ ಮನೆಯಲ್ಲಿ ಮದುವೆ (ಒಹ್ ಅಪ್ಪಚ್ಚಿ ಅಂದ್ರೆ ಚಿಕ್ಕಪ್ಪ ಅಂತ ಕಾಣ್ರಿ)
ಅಷಾಢಮಾಸ ಪಂಚಮಿ ಜುಲೈ ಮಾಸದ 14 ರಂದು. ಜೋಡಿ ಮದುವೆ, ಜೋಡಿ ಮದುವೆ ಅಂದ್ರೆ ಏನು ಅಂತ ವ್ಯಖ್ಯಾನ ಮಾಡುವುದು ಕಷ್ಟ. ಮದುವೆ ಅಂದ್ರೆನೆ ಜೋಡಿ ಆಗೋದು ಅಂತ ಅರ್ಥ. ಮತ್ತೆ ಜೋಡಿ ಮದುವೆ ಅಂದ್ರೆ ಏನು ಅಂತಂದ್ರೆ ಒಂದೇ ಮನೆಯಲ್ಲಿ ಎರಡು ಮದುವೆ.

ಲೊಕೇಶನ್ ಶಿಪ್ಟ್

ಅದು 15 ವರ್ಷದ ಹಿಂದಿನ ನೆನಪು. ಬೈಂದೂರಿನಿಂದ ಎಂಟು ಕಿಲೋಮೀಟರ್ ಕೊರಾಡಿ ಗ್ರಾಮ. ಹೋಗುವದಕ್ಕೆ ದಿನಕ್ಕೆ ಒಂದೇ ಬಸ್ಸು. ಮಣ್ಣು ರಸ್ತೆ. ಮಧ್ಯರಸ್ತೆಯನ್ನ ತುಂಡರಿಸುವ ಒಂದು ದೊಡ್ಡ ಹಳ್ಳ. ಮಳೆಗಾಲದಲ್ಲಿ ಬಸ್ಸು ಹಳ್ಳದತನಕ ಮಾತ್ರ ಹೋಗುತ್ತಿತ್ತು. ಅಲ್ಲಿಂದ ಸಂಕ ದಾಟಿ ಮತ್ತೆ ಕಾಡಿನಲ್ಲಿ ನಾಲ್ಕು ಕಿಲೋಮೀಟರ್ ನಡೆದರೆ ಸಿಗುವದೇ ಕೊರಾಡಿ ಗ್ರಾಮ. ಕೆಲವೊಂದುಸಲ ಅಬ್ಬರದ ಮಳೆಗೆ ಸಂಕವೂ ತೇಲಿಕೊಂಡು ಹೋಗಿ ಮತ್ತೆ ಊರಿನವರು ಒಟ್ಟಾಗಿ ಸಂಕ ಹಾಕುವ ತನಕ ಕೊರಾಡಿ ಗ್ರಾಮ ದ್ವಿಪವೇ ಸರಿ. ಊರಿನಲ್ಲಿರುವ ಬೆರಳೆಣಿಕೆಯ ಮನೆಯವರ ಪಾಡು ಹಾರೋ ಹರ . ಕರೆಂಟಿಲ್ಲ, ಫೋನ್ ಇಲ್ಲ, ವಾಹನ ಇಲ್ಲ, ಸುತ್ತಲೂ ಕಾಡು. ಮನೆಯಿಂದ ಹೊರಗಡೆ ಕಾಲಿಟ್ಟರೆ ರಕ್ತ ಹೀರುವ ಜಿಗಣೆ. ಒಂದು ಕಪ್ ಬಿಸಿ ಚಹಾ ಕುಡಿಯುವದಕ್ಕೆ ಅಂತ ಕಟ್ಟಿಕೊಂಡ ಅಕಳ ಹಾಲು ಕರೆಯಲು ಹೋದರೆ ರಪಕ್ ಅಂತ ಒದೆದು ಮನೆಗೆ ಕಳುಹಿಸುತ್ತಿತ್ತು. ಆಕಳ ಕರುವನ್ನ ಕೊಟ್ಟಿಗೆಗೇ  ಬಂದು ಹುಲಿ ಹೊತ್ತೊಯ್ದರೆ ಯಾವ ಆಕಳು ತಾನೆ ಹಾಲು ಕರೆಯಲು ಸಾಧ್ಯ ಹೇಳಿ. ಅದೆಂತಹ ಕಾಡಾಗಿತ್ತು ಅಂತ ಇನ್ನು ನೀವೇ ಊಹಿಸಿಕೊಳ್ಳಿ.

ಕರಿ ಮೋಡ
ಕಂಬಳಿ ಕೊಪ್ಪೆ
ಕಪ್ಪು ಚಹಾ
ಗಪ್ಪಗೆ ಕುಳಿತ ಕಾಗೆ
ಹಗಲಲ್ಲೇ ಗದ್ದೆಗೆ ಬಿದ್ದ ಹಂದಿ
ಒದ್ದೆ ಪಂಚೆ
ಕೆಸರು ಕಾಲು
ಚಿಮಣಿ ದೀಪ
ಬಿರುಸು ಗಾಳಿ
ಇವೆಲ್ಲವೂ ಮಳೆಯ ಸಂಗಾತಿಗಳು

ಸ್ವಸ್ತಿ ಶ್ರೀ ಶಾಲಿವಾಹನ ಶಕೆ 1913 ಆಷಾಢ  ಶುದ್ಧ ಪಂಚಮಿ ಜುಲೈ 2013 ನೇ ಇಸವಿ

ಬೈಂದೂರು ಪೇಟೆಯಲ್ಲಿ ಇಳಿದಕೂಡಲೇ ಬಾಡಿಗೆಗೆ ಅಟೋ ರಿಕ್ಷಾ,  ಒಮಿನಿ ಕಾರು, ಡಾಂಬರು ರಸ್ತೆ. ಮನೆಗೊಂದು ಬೈಕು ಕಾರು. ಎತ್ತರದ ಬ್ರಿಡ್ಜು. ಎಲ್ಲರ ಕೈಯಲ್ಲೂ ಎರಡೆರಡು ಸಿಮ್ಮು ತುರುಕಿಸುವ ಮೊಬೈಲು. ಜಗಮಗಿಸುವ ಕರೆಂಟು. ಕರೆಂಟು ಕೈಕೊಟ್ಟರೆ ಜನರೇಟರ್, ಹಂಚಿಗೆ ವಿದಾಯಹೇಳಿ ಎದ್ದುನಿಂತ ತಾರಸಿ ಮನೆ, ಊರಿಗೊಂದು ಚಂದದ ದೇವಸ್ಥಾನ. ಸಿಮೆಂಟಿನ ಅಚ್ಚಿನಿಂದ ನಿರ್ಮಾಣವಾದ ಸುಂದರ ಗೋಪುರದ ವಿಗ್ರಹಗಳು. ಕೊಟ್ಟಿಗೆಯಲ್ಲಿ ಜೆರ್ಸಿ ಆಕಳು, ಕಾಡಿನ ಜಾಗದಲ್ಲಿ ಎದ್ದುನಿಂತ ರಬ್ಬರ್ ಮರಗಳು. ಚಪ್ಪರಕ್ಕೆ ಪ್ಲಾಸ್ಟಿಕ್ ತಗಡಿನ ಹೊದಿಕೆ, ಮದುವೆಗೆ ಸಾವಿರದ ಚಿಲ್ಲರೆ ಜನ.

ಕೊನೆ ಹನಿ

ಹದಿನೈದು ವರ್ಷದ ಕೆಳಗೆ ಕಂಡ ಕೊರಾಡಿ ಗ್ರಾಮ ಇದೇನಾ...?  ಅಲ್ಲ ಕಣ್ರೀ ಇದಲ್ಲವೇ ಅಲ್ಲ ,
ಅಲ್ಲಿ ಈಗ ಯಾರೂ ಸಂಕ ಬಳಿದು ಹೋದ ಕಥೆ ಹೇಳುವವರು, ಜಸ್ಟ್  ದಾರಿ ಮಧ್ಯದಲ್ಲಿ ಅಡ್ಡಬಂದ ಹಂದಿ ಕಥೆಹೇಳುವವರು. ಜಿಗಣೆ ಕಚ್ಚಿಸಿಕೊಂಡು ರಕ್ತ ನಿಲ್ಲಲು ಗಾಯಕ್ಕೆ ಸುಣ್ಣ ತಿಕ್ಕಿಕೊಳ್ಳುತ್ತಿರುವವರು. ಹುಲಿ ಆಕಳನ್ನ ಹಿಡಿದುಕೊಂಡು ಹೋದ ಕಥೆಯನ್ನ ಮತ್ತು ನಾನಾತರಹದ ತರಹೇವಾರಿ ಕಾಡಿನ ಬಿಸಿ ಬಿಸಿ ಕಥೆಯನ್ನ ಯಾರು ಹೊಳೋರೆ ಇಲ್ಲ. ಸಾಯಂಕಾಲ ಮಕ್ಳು ಮಳೆಗಾಲದಲ್ಲಿ ಗೇರುಬೀಜ, ಹಲಸಿನ ಬೀಜ ಸುಟ್ಟಿಕೊಂಡು ತಿನ್ನೋದೂ ಇಲ್ಲ. ಅಂಗಡಿಯಿಂದ ಕ್ಯಾಡ್ಬರಿ, ಡೇರಿಮಿಲ್ಕ್, ಕುರ್ಕುರೆ ತರಲಿಲ್ಲ ಅಂದ್ರೆ ಹಟ ಬಿಡೋದಿಲ್ಲ.



7 comments:

  1. ಕಾಲ ಬದಲಾಗಿದ್ದು ... ಕಾಲಕ್ಕೆ ತಕ್ಕಂತೆ ಬದಲಾದದ್ದು ...

    ನಿರೂಪಣೆ ಸೂಪರ್ ... :)

    ReplyDelete
  2. ಎಂಥಾ ಬದಲಾವಣೆ ಇದು!

    ReplyDelete
  3. ನಿಜವಾಗಿಯ ಅದ್ಬುತ ನಿರೂಪಣೆ.

    ReplyDelete