Friday, August 27, 2010

ಹದವಿಲ್ಲ ಮಾತಿನಲಿ ಚಿತ್ತ ಸಂಯಮವಿಲ್ಲ


ನಮ್ಮಲ್ಲೊಂದು ಗಾದೆಯುಂಟು "ಊರಿಗೆ ಬದ್ಧಿಹೇಳಿ ಒಲೆಯಲ್ಲಿ ಉಚ್ಚೆ ಹುಯ್ದಾ ಎಂಬುದಾಗಿ" ,ಮತ್ತದೇ ದಾಟಿಯ ಗಾದೆಯೊಂದುಂಟು "ಹೇಳುವದು ಕಾಶಿಕೆಂಡ ತಿನ್ನುವದು ಮಶಿ ಕೆಂಡ" ಅಂತ . ಮತ್ತೆ ತಿಳಿದವರು ಇನ್ನೂ ಒಂದು ಹೆಜ್ಜೆ ಮುಂದೆ ಹೋಗಿ ಹೇಳಿದ್ದಾರೆ," ಹೆಳುವದು ಆಚಾರ ಮಾಡುವದು ಅನಾಚಾರ", ಹೀಗೆ ಬಾಯಲ್ಲಿ ವೇದಾಂತ ಹೆಳುವದಕ್ಕೆ ನಾನೆಂದು ಕಡಿಮೆ ಮಾಡಿಕೊಂಡವನಲ್ಲ. ಆದರೆ ಯಾವತ್ತೂ ಆಚರಣೆಗೆ ತಂದವನಲ್ಲ. ರೈಲು ಬಿಡಲಿಕ್ಕೇನು ಹಳಿಯ ಹಾಕಿ ಕೊಂಡವನಲ್ಲ. ಹೀಗೆ ಒಂದಿನ ಆಲಸಿಯಾಗಿ ಕುಳಿತಿರಲು ಹೋಳೆದ ಎರಡು ಸಾಲುಗಳನ್ನ ನಿಮ್ಮ ಮುಂದಿಟ್ಟಿರುವೆ ............

ಗುರಿಯಿಲ್ಲ ಜೀವನಕೆ ಶಿಸ್ತು ನಿಯಮಗಳಿಲ್ಲ
ಹದವಿಲ್ಲ ಮಾತಿನಲಿ ಚಿತ್ತ ಸಂಯಮವಿಲ್ಲ
ಭಾವನೆಗಳ ಹೊಯ್ದಾಟ ನಾಟಕವು ಎಲ್ಲಾ
ಬದುಕುವದಕೆ ಎಲ್ಲವೂ ಕಪಟವಾಯ್ತಲ್ಲ
ಪುರುಷಾರ್ಥದ ತಿರುಳ ತಿಳಿಯೆ ಸನಿಹವಾಗುವದೆಲ್ಲ

ಧರ್ಮವೆಂದರೆ ಕುರುಡು ಮತಾಂಧತೆಯಲ್ಲ
ಮಾತಿನಲಿ ಬೊಬ್ಬಿಟ್ಟು ಅರಚುವದೂ ಅಲ್ಲ
ಮನುಕುಲದ ನಿಯಮವ ಮೀರಿ ನಡೆಯುವದಲ್ಲ
ಬಾಯಲ್ಲಿ ವೇದಾಂತ ಜಪಿಸುವದೂ ಅಲ್ಲ
ತಿಳಿದವರು ಹೇಳಿಹರು ದಯೆಯೆ ಧರ್ಮದ ಮೂಲ

ಅರ್ಥವೆಂದರೆ ಅರ್ಜಿಸಿದ ಕೀಳು ಹಣವಲ್ಲ
ಹಣಕಾಗಿ ಎಲ್ಲವನು ಮಾರುವದೂ ಅಲ್ಲ
ಕೈಚಾಚಿ ಬೇಡುವದು, ಲಂಚ ಆಮಿಷವಲ್ಲ
ಬೊಕ್ಕಸದಿ ಕೂಡಿಟ್ಟು ಕಾಯುವದೂ ಅಲ್ಲ
ತಿಳಿದವರು ಹೆಳಿಹರು ಧರ್ಮದ ನೆಲೆಗಟ್ಟಿನಲಿ ಅರ್ಜಿಸುವದೆಲ್ಲ

ಕಾಮವೆಂದರೆ ಪರನಾರಿಯರ ಸಂಗಸುಖವಲ್ಲ
ಪಕ್ಕದಲಿ ನಿಂತವಳ ಅಂಗಾಂಗ ತಡಕುವದಲ್ಲ
ದಿನಕೊಂದು ಹಾಸಿಗೆಯ ಬದಲಿಸುವದೂ ಅಲ್ಲ
ನೂರೊಂದು ಆಸೆಯನು ಹೊತ್ತು ಬದುಕುವದಲ್ಲ
ತಿಳಿದವರು ಹೇಳಿಹರು ಅತಿಯಾಗಿ ಬಯಸಿ ಮೊಹಿಸುವದು ಸಲ್ಲ


ಮೋಕ್ಷವೆಂದರೆ ಗಂಗೆಯಲಿ ಮಿಂದು ಜಪಿಸುವದಲ್ಲ
ನೂರಾರು ಕೋಟಿ ದೇವರ ಸ್ಮರಿಸುವದಲ್ಲ
ಯೋಗ ಧ್ಯಾನ ಜಪ ತಪ ಹೋಮ ಹವನಗಳಲ್ಲ
ಪದ್ಮಾಸನದಿ ಯೋಗಿ ವೇಷದಿ ಕುಳಿತುಕೊಳ್ಳುವದಲ್ಲ
ತಿಳಿದವರು ಹೇಳಿಹರು ಜಗದನಂಟನು ಬಿಟ್ಟು ಮೋಕ್ಷಪಡೆಯಬೇಕಲ್ಲ

1 comment:

  1. ಕವನ ಚೆನ್ನಾಗಿದೆ. keep it up..

    (suggetion- ಇಂದು ವೇದಾಂತ ಹೇಳುವವರೇ ಹೆಚ್ಚು , ಹೇಳಿದಂತೆ ನಡೆದು ಕೊಳ್ಳುವವರು ತುಂಬಾ ಕಡಿಮೆ.
    so... ಮಸಿ ಕೆಂಡ ತಿಂದರು ಪರವಾಗಿಲ್ಲ... ವಲೆಯಲ್ಲಿ ಬೇಡ ........ :):P.)

    ReplyDelete